ಕೃಷ್ಣನಿಗೆ ಒಮ್ಮೆ, ಕುದಿ ಕುದಿ ಜ್ವರ.
ತಾಯಿ ಯಶೋದೆಯ ಯಾವ ಉಪಚಾರವೂ ಮಾಧವನ ಬೇಗುದಿಯನ್ನು ತಗ್ಗಿಸಲೇ ಇಲ್ಲ. ಚಿಂತಾಕ್ರಾಂತಳಾದ ಮಾಯಿ, ಮಗನನ್ನೇ ಕೇಳುತ್ತಾಳೆ ; "ಮಗನೇ! ಯಾವ್ಯಾವ ದೇವರಿಗೆ ಮೊರೆ ಹೊತ್ತರೂ ಇಳಿಯದ ಈ ಜ್ವರಕ್ಕೆ, ನಾನಾದರೂ ಏನು ಮಾಡಲಿ? ನೀನೇ ಹೇಳು! "
ಇಷ್ಟೇ ಇಷ್ಟು ಕಣ್ಬಿಟ್ಟು,"ನನ್ನನ್ನು ಅತಿ ಹೆಚ್ಚು ಪ್ರೀತಿಸುವ ಜೀವದ ಅಂಗಾಲಿಗೆ ಮೆತ್ತಿದ ಧೂಳ ತಂದು, ನನ್ನ ಹಣೆಗೆ ಹಚ್ಚು. ನನ್ನ ಜ್ವರವಿಳಿಯುವುದು ", ನರಳಿದ ಶ್ಯಾಮ.
ಯಶೋದೆ ಹೌಹಾರಿದಳು!
ಇದೆಂಥ ಹುಚ್ಚು ಕೋರಿಕೆ! ಯಾರೂ ಒಪ್ಪರು!
ಜ್ವರ ನೆತ್ತಿಗೇರಿರಬೇಕು!
ಆದರೂ....., ಜ್ವರದ ತಾಪ ಇಳಿಯುವುದೇ ಆದರೆ ಯಾವುದಾದರೂ ಸೈ! ಅರ್ಧ ಮನದಿಂದಲೇ ಹೊರಟಳು.
ಇಡೀ ವೃಂದಾವನವೇ ಕೃಷ್ಣ ಪ್ರೀತಿಯಲ್ಲಿ ನೆನೆದಿರುವಾಗ, ಒಂದು ಚಿಟಿಕೆ ಪಾದಧೂಳಿ ಕೊಡುವವರು ಸಿಗದೇ ಇರಲಾರರು, ನಂಬಿಕೆ ನಡೆಯಿಸಿತು...
ವೃಂದಾವನದ ಮನೆಮನೆಯ ಬಾಗಿಲನ್ನೂ ತಟ್ಟಿದಳು.
" ನಿಮ್ಮ ಪ್ರೀತಿಯ ಕನ್ಹಯ್ಯನಿಗೆ ಜ್ವರ. ಪಾದಧೂಳಿ ಹಚ್ಚಿದರಷ್ಟೇ ಇಳಿವುದಂತೆ. ಕೊಂಚ ಕೊಡುವಿರಾ? "
ಜನ ಹೌಹಾರಿದರು!
"ಏನಿದು ಗೋಪಮ್ಮಾ!
ದೇವರ ಹಣೆಗೆ ನಾವು ಹುಲುಮಾನವರ ಪಾದಧೂಳಿ ತಾಗಿಸುವುದೇ? ಪಾಪವದು ಪಾಪ! ರೌರವ ನರಕಕ್ಕೆ ಹೋಗುತ್ತೇವೆ ನಾವು! ನಡೆ ನಡೆ!"
ಅದೇ ಪ್ರಲಾಪ ಮನೆಮನೆಯಲೂ...
" ಅಮ್ಮಾ... ! " ಕೃಷ್ಣ ನರಳಿದಂತೆ ಕೇಳಿ, ಲಗುಬಗೆಯಿಂದ ಇನ್ನೊಂದು, ಮತ್ತೊಂದು ಬಾಗಿಲು ತಟ್ಟುತ್ತಲೇ ಹೋದಳು ಯಶೋದೆ.
ಗೋಪಿಯರ ಸಾಲೆಲ್ಲ ಮುಗಿದು, ಗೋಪರ ಮನೆಯೆಲ್ಲ ಹಾಯ್ದು, ಕೊನೆಯದಾಗಿ ರಾಧಾ - ಅಯನರ ಮನೆ ಹೊಕ್ಕಳು ಯಶೋದೆ. ಮತ್ತದೇ ಪ್ರಲಾಪ... "ಕೊಡುವಿರಾ ಅಷ್ಟು ಪಾದದ ಧೂಳು? "
ಮೊಸರು ಕಡೆಯುತ್ತಿದ್ದ ರಾಧೆಗೆ ಯಶೋದೆಯ ದನಿ ಕೇಳಿಸಿತು. ಜಿಡ್ಡುಗೈಯ್ಯನ್ನು ಸೆರಗಿಗೆ ಒರೆಸುತ್ತಾ ಅಂಗಳಕ್ಕೆ ಧಾವಿಸಿದಳು. ಗಂಡ ಅಯನ ಆಗಲೇ ಕೈ ತಿರುಗಿಸಿ ಆಗಿತ್ತು. ತಡ ಮಾಡಲಿಲ್ಲ. ದೇವರ ಮುಂದಿದ್ದ ವೀಳ್ಯದೆಲೆಯನ್ನು ತನ್ನ ಚಿಗುರುಬೆರಳಲ್ಲಿ ಹಿಡಿದು, ಗಂಧ ತೇಯುವ ಮಣೆಗೆ ಎರಡು ಉಧ್ಧರಣೆ ನೀರು ಬಿಟ್ಟು, ಗಂಧದ ಕೊರಡು ತೀಡುವಂತೇ ಅಂಗಾಲನ್ನು ಗಸಗಸನೆ ಮಣೆಯ ಮೇಲೆ ತೀಡಿದಳು. ಮೊಸರು ಗಡಿಗೆಯಲ್ಲಿ ಬೆಣ್ಣೆ ತೇಲುವಂತೆ, ರಾಧೆಯ ಪಾದಗಂಧ ಎದ್ದೆದ್ದು ಬಂತು. ಕೃಷ್ಣನ ಸೋತ ಮುಖ ಎದುರಿಗೆ ಬಂದು, ಮನದ ತುಂಬ ಮುದ್ದುಕ್ಕಿ ಬಂದು, ವೀಳ್ಯದೆಲೆಗೆ ಗಂಧ ತುಂಬಿಸಿಕೊಟ್ಟಳು.
ತುಟಿಯೆರಡು ಮಾಡದೇ, ಯಾವ ಪ್ರಶ್ನೆಯನೂ ಕೇಳದೇ, ಕೃಷ್ಣ ಬಯಸಿದ ಎಂಬ ಒಂದೇ ಕಾರಣಕ್ಕೆ, ಪಾಪ- ಪುಣ್ಯ, ಸ್ವರ್ಗ- ನರಕಗಳ ಗೊಡವೆಯ ಬಾಧೆಯಿಲ್ಲದೇ, ಇದು ಕೃಷ್ಣ ಪೂಜೆಯೇ ಎಂಬ ಭಾವದಿಂದ ಪಾದಗಂಧ ತೇಯ್ದುಕೊಟ್ಟ ರಾಧೆಯ ಪರಿಗೆ ಯಶೋದೆ ದಿಗ್ಮೂಢಳಾದಳು! ರಾಧೆಯ ಕೇಳಿದಳು ಕೂಡಾ...
"ಮಾಯಿ....ಪಾಪ -ಪುಣ್ಯ, ಸ್ವರ್ಗ - ನರಕಗಳಾಚೆಯದು ಈ ರಾಧೆಯ ಪ್ರೀತಿ...ಎಲ್ಲವೂ ಅವನದೇ...ಅವನಿದ್ದಾನೆ ಬಿಡಿ ..!" ಉತ್ತರವೊಂದೇ.
ಗದ್ಗದಿತ ಯಶೋದೆ, ಕಂಪಿಸುವ ಕೈಗಳಲಿ ವೀಳ್ಯದೆಲೆ ಹಿಡಿದು ಮನೆಯತ್ತ ಧಾವಿಸಿದಳು... ಕೃಷ್ಣನ ನರಳಾಟ ಮುಗಿಲು ಮುಟ್ಟಿತ್ತು... " ಕಾನ್ಹಾ... ಇಗೋ...ನಿನ್ನ ರಾಧೆಯ ಪಾದಧೂಳಿ.. ಪೂಸಿಕೋ...! "
ನಸುನಗುತ್ತ ಕುಳಿತ ಕೃಷ್ಣನ ಮೊಗದಲ್ಲಾಗಲೇ ಗೆಲುವು! "ನೋಡಿದೆಯಾ ನನ್ನ ರಾಧೆಯ ಪ್ರೀತಿಯ! ಹದಿನಾರು ಸಾವಿರ ಸಖಿಯರಲ್ಲೆಲ್ಲ ಅನರ್ಘ್ಯ ರತ್ನ ಅವಳು! ನನ್ನ ಜೀವ ಸಖಿ.. ನನ್ನ ಮನದನ್ನೆ...ನನ್ನ ರಾಧೆ...ನನ್ನ ರಾಧೇ...!", ಜ್ವರದ ತಾಪಕ್ಕೆ ಕನಲುತ್ತ, ಹಲುಬುತ್ತ, ಪಾದಗಂಧವನ್ನು ಹಣೆಗೆ ಬಳಿದುಕೊಂಡ ಕೃಷ್ಣ...! ರಾಧಾ..ರಾಧಾ...ರಾಧೇ... ರಾಧೇ... ತುಟಿಯಮೇಲೆ ಅವಳದೇ ಜಪ.
ಹಣೆಯ ತಂಪು ಕಣ್ಣಿಗಿಳಿದು ,
ಅಶ್ರುಧಾರೆ ಕೆನ್ನೆಗಿಳಿದು,
ಜ್ವರದ ತಾಪ ತಣಿಯಲಾಗಿ,
ಎದೆಯ ತುಂಬ ರಾಧೆ ತುಂಬಿ,
ಜ್ವರ ಇಳಿದು,
ತುಸು ಬೆವೆತು,
ತಣ್ಣಗೆ ನಿದ್ದೆ ಹೋದ ಶ್ಯಾಮ...
ನಮ್ಮ ರಾಧೇಶ್ಯಾಮ....
ಬೆಟ್ಟದ ಹೂ 💙
(2022ರಲ್ಲಿ ಕನ್ನಡ ಮಾಣಿಕ್ಯ ಪತ್ರಿಕೆಯ "ಹೂ ಗೊಂಚಲು" ಕಾಲಮ್ ನಲ್ಲಿ ಪ್ರಕಟವಾದ ಬರಹ )